ಕುಕ್ಕೆ ಸುಬ್ರಹ್ಮಣ್ಯ : ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮಾಫಿಯಾಗೆ ಬ್ರೇಕ್ ಹಾಕಿದ ಸಹಾಯಕ ಆಯುಕ್ತರು....!

ಕುಕ್ಕೆ ಸುಬ್ರಹ್ಮಣ್ಯ;ಸುಬ್ರಹ್ಮಣ್ಯ ದೇವರ ಹೆಸರಲ್ಲಿ ನಡೆಯುತ್ತಿದ್ದ  ಅಕ್ರಮ ಮರಳು ಗಣಿಗಾರಿಕೆಗೆ ಸಹಾಯಕ ಆಯುಕ್ತರು ಕಡಿವಾಣ ಹಾಕಿದ್ದಾರೆ.
ಸುಬ್ರಹ್ಮಣ್ಯ ಪರಿಸರ ಸೂಕ್ಷ್ಮ ವಲಯ ಎಂದು ಸರ್ಕಾರ ಘೋಷಿಸಿರುವ ಕಾರಣ ಇಲ್ಲಿನ ಕುಮಾರಧಾರ ನದಿಯಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಇಲ್ಲ.
ಆದರೆ ಪ್ರತಿವರ್ಷ ನಡೆಯುವ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಮರುದಿನ ಕುಮಾರಧಾರ ನದಿಯಲ್ಲಿ ದೇವರ ಅವಭೃತೋತ್ಸವ ಹಾಗೂ ನೌಕಾವಿಹಾರ ನಡೆಯುವ ಕಾರಣ ಜಳಕದ ಗುಂಡಿಯ ಮರಳು ಮತ್ತು ಹೂಳನ್ನು ತೆರವುಗೊಳಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ದುರುಪಯೋಗಿಸಿಕೊಡು ಇಲ್ಲಿನ ಕೆಲ ಅಕ್ರಮ ಮರಳು ದಂಧೆಕೋರರು ಲಕ್ಷಾಂತರ  ಮೌಲ್ಯದ ಮರಳನ್ನು ಕಳ್ಳ ಸಾಗಾಟ ಮಾಡುತ್ತಿದ್ದರು.

ಉಚಿತವಾಗಿ ದೊರೆಯುತ್ತಿದ್ದ ಮರಳನ್ನು ಸಾರ್ವಜನಿಕರಿಗೆ, ಬಡವರಿಗೆ ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದರಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ವರ್ಷ ಈ ದಂಧೆಗೆ  ಸಂಪೂರ್ಣ ಕಡಿವಾಣ ಬಿದ್ದಿದೆ. 
ಜಳಕದ ಗುಂಡಿಯ ಮರಳು ತೆಗೆಯುವ ಜವಾಬ್ದಾರಿಯನ್ನು ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಗೆ ವಹಿಸಿದ ಆಯುಕ್ತರು ಈ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.  ಮಾರುಕಟ್ಟೆಯ ಮೌಲ್ಯ ಪ್ರಕಾರ ಸುಮಾರು 20 ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ನೂರಾರು ಲೋಡು ಮರಳು ಸುಬ್ರಹ್ಮಣ್ಯ ಕುಲ್ಕುಂದ ದಲ್ಲಿರುವ ಲೋಕೋಪಯೋಗೆ ಇಲಾಖೆಯ ನಿವೇಶನದಲ್ಲಿ ಭಧ್ರವಾಗಿ ದಾಸ್ತಾನು ಮಾಡಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಮುಕ್ತ ಪ್ರಶಂಸೆಗಳು ವ್ಯಕ್ತವಾಗಿವೆ.ಮುಂದಿನ ದಿನಗಳಲ್ಲಿ ಇಲಾಖಾ ಮುಖಾಂತರ ಹರಾಜು ನಡೆದು ಯೋಗ್ಯ ಬೆಲೆಗೆ ಮರಳು ದೊರೆಯಬಹುದೆಂದು ಸುಬ್ರಹ್ಮಣ್ಯ ಆಸುಪಾಸಿನ ನಾಗರಿಕರು ನಿರೀಕ್ಷೆಯಲ್ಲಿದ್ದಾರೆ.

0 ಕಾಮೆಂಟ್‌ಗಳು