ಕುಕ್ಕೇ ಸುಬ್ರಹ್ಮಣ್ಯ:ಮಾಹಾವಿಷ್ಣುವಿನ ಆರಾಧನೆ ಸರ್ವಾಭೀಷ್ಠ ಪ್ರದವಾದುದು. ಎಲ್ಲ ದೇವತೆಗಳ ಆರಾಧನೆಯು ಅಂತರ್ಗತನಾದ ಭಗವಂತನಿಗೆ ಅರ್ಪಿತ. ಪಂಚಭೂತ ಪದಾರ್ಥಗಳ ಮಧ್ಯೆ ವಾಸಿಸುವ ನಾವು ಭಗವಂತನನ್ನು ಪ್ರತೀಕದಲ್ಲಿ ಉಪಾಸನೆ ಮಾಡಬೇಕು. ಅದರಲ್ಲೂ ಗಾಳಿ, ಆಕಾಶಗಳು ದೃಷ್ಟಿ ಗೋಚರವಲ್ಲ. ಆದ್ದರಿಂದ ಮಣ್ಣು,ನೀರು, ಬೆಂಕಿಗಳ ಪ್ರತೀಕದಲ್ಲಿ ಉಪಾಸನೆ ಮಾಡುತ್ತೇವೆ. ವಿಷ್ಣುವಿನ ಆರಾಧನೆಗೆ ದೊಡ್ಡ ಸಾಧನ ಎಂದರೆ ಮಂಡಲ.ಪಂಚಭೂತ ಪದಾರ್ಥಗಳ ಪ್ರತಿನಿಧಿಯಾಗಿ ಪಂಚವರ್ಣಗಳನ್ನು ಬಳಸಿ ಮಂಡಲ ರಚಿಸಬೇಕು. ಚಕ್ರಾಬ್ಜ ಮಂಡಲದಲ್ಲಿ ಹೇಗೆ ಆರಾಧನೆ ಮಾಡಬೇಕೆಂಬುದನ್ನು ನಮ್ಮ ಶಿಷ್ಯ ವಿದ್ವಾಂಸ ಹಳೆನೇರೆಂಕಿ ಶ್ರೀಯುತ ಕೃಷ್ಣಪ್ರಸಾದ ನೂರಿತ್ತಾಯ ಇವರು ರಚಿಸಿದ ಸುಂದರ ಕೃತಿ ಚಕ್ರಾಬ್ಜಮಂಡಲ ಆರಾಧನವಿಧಿ: ನಮಗೆ ತುಂಬು ಸಂತಸ ನೀಡಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು ಸುಬ್ರಹ್ಮಣ್ಯ ಮಠದಲ್ಲಿ ಕೃತಿ ಬಿಡುಗಡೆಗೊಳಿಸಿ ಅನುಗ್ರಹ ಸಂದೇಶವಿತ್ತರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಾಹಿತಿ ಟಿ ನಾರಾಯಣ ಭಟ್ ರಾಮಕುಂಜ ಸ್ವಾಗತಿಸಿದರು. ಕೆ ಕೃಷ್ಣಪ್ರಸಾದ ನೂರಿತ್ತಾಯ ಧನ್ಯವಾದ ಸಮರ್ಪಿಸಿದರು. ಸಹಸಂಪಾದಕ ಸೂರ್ಯಪ್ರಕಾಶ ಉಡುಪ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಳದ ಅರ್ಚಕರಾದ ಶ್ರೀ ರಾಮಕೃಷ್ಣ ಆಸ್ರಣ್ಣ, ಶ್ರೀ ರಮೇಶ ಆಸ್ರಣ್ಣ, ಈರಕಿಮಠ ನರಹರಿ ಉಪಾಧ್ಯಾಯ, ಇಜ್ಜಾವು ಶಿವಪ್ರಸಾದ್, ನಾರಂಪಾಡಿ ಸುದರ್ಶನ ಕೆದಿಲಾಯ, ಶ್ರೀಮತಿ ಸಂಧ್ಯಾ, ಶ್ರೀಮತಿ ಸುನೀತ,ಸುಕೃತ್ ಕೆದಿಲಾಯ,ಸುಮೀಕ್ಷಾ ಉಪಸ್ಥಿತರಿದ್ದರು.
0 ಕಾಮೆಂಟ್ಗಳು